ಅದ್ಯಾಯ 11

ದೇವರ ಆಲಯವನ್ನು ಅಳೆದದ್ದನ್ನೂ ದೇವರ ಇಬ್ಬರ ಸಾಕ್ಷಿಗಳನ್ನೂ ಕುರಿತದ್ದು; 1 ತರುವಾಯ ಅಳತೆಗೊಲಿನಂಥ ಒಂದು ಅಳತೆ ಕೋಲನ್ನು ನನಗೆ ಕೊಟ್ಟು ಹೀಗೆ ತಿಳಿಸಲಾಯಿತು: <<ನೀನೆದ್ದು ದೇವರ ಆಲಯವನ್ನೂ ಯಜ್ಞವೇದಿಯನ್ನೂ ಅಳತೆಮಾಡಿ ಆಲಯದಲ್ಲಿ ಆರಾಧನೆಮಾಡುವವರನ್ನು ಎಣಿಕೆಮಾಡು. 2 ಆಲಯದ ಹೊರಗಿರುವ ಹೊರಾಂಗಣವನ್ನು ಅಳೆಯದೆ ಬಿಟ್ಟುಬಿಡು; ಅದು ಅನ್ಯಜನರಿಗಾಗಿ ಕೊಡಲ್ಪಟ್ಟಿದೆ; ಅವರು ಪರಿಶುದ್ಧ ಪಟ್ಟಣವನ್ನು ನಲವತ್ತೆರಡು ತಿಂಗಳು ತುಳಿದಾಡುವರು. 3 ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು ಗೋಣಿತಟ್ಟುಗಳನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಅವರಿಗೆ ವರವನ್ನು ಕೊಡುವೆನು.>> 4 ಭೂಲೋಕದ ಒಡೆಯನ ಮುಂದೆ ನಿಂತಿರುವ ಎರಡು ಎಣ್ಣೆಯ ಮರಗಳೂ ಮತ್ತು ಎರಡು ದೀಪ ಸ್ತಂಭಗಳೂ ಇವರೇ. 5 ಇವರಿಗೆ ಯಾವನಾದರೂ ಕೇಡನ್ನುಂಟುಮಾಡಬೇಕೆಂದಿದ್ದರೆ ಇವರ ಬಾಯೊಳಗಿಂದ ಬೆಂಕಿಯು ಹೊರಟು ಇವರ ಶತ್ರುಗಳನ್ನು ದಹಿಸಿಬಿಡುವುದು; ಇವರಿಗೆ ಕೇಡನ್ನು ಉಂಟುಮಾಡಬಯಸುವವರಿಗೆ ಆ ರೀತಿಯಾಗಿಸಾವು ಅವುಷೆ . 6 ಅವರು ಪ್ರವಾದಿಸುವ ದಿನಗಳಲ್ಲಿ ಮಳೆಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಅವರಿಗೆ ಇರುವುದು. ಇದಲ್ಲದೆ ಅವರಿಗೆ ಇಷ್ಟಬಂದಾಗೆಲ್ಲಾ ನೀರು ರಕ್ತವಾಗುವಂತೆ ಮಾಡುವುದಕ್ಕೂ ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಹಿಂಸಿಸುವುದಕ್ಕೂ ಅಧಿಕಾರವುಂಟು. 7 ಅವರು ತಮ್ಮ ಸಾಕ್ಷಿಗಳನ್ನು ಹೇಳಿ ಮುಗಿಸಿದ ನಂತರ, ಪಾತಾಳಲೋಕದಿಂದ ಬರುವ ಮೃಗವು ಇವರ ಮೇಲೆ ಯುದ್ಧಮಾಡಿ ಇವರನ್ನು ಜಯಿಸಿ ಕೊಲ್ಲುವುದು. 8 ಈ ಸಾಕ್ಷಿಗಳ ಶವಗಳು ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವವು. ಆ ಪಟ್ಟಣಕ್ಕೆ ಗೂಢಾರ್ಥವಾಗಿ <ಸೊದೋಮ್> ಎಂದು, ಐಗುಪ್ತ ಎಂದೂ ಹೆಸರುಗಳುಂಟು; ಇವರ ಒಡೆಯನು ಸಹ ಅಲ್ಲಿಯೇ ಶಿಲುಬೆಗೆ ಹಾಕಲ್ಪಟ್ಟಿದ್ದನು. 9 ಸಕಲ ಜನ, ಕುಲ, ಭಾಷೆ ಜನಾಂಗಗಳಿಗೆ ಸೇರಿದವರು ಈ ಸಾಕ್ಷಿಗಳ ಶವಗಳನ್ನು ಮೂರುವರೆ ದಿನಗಳವರೆಗೂ ನೋಡುವರು ಮತ್ತು ಅವರ ಶವಗಳನ್ನು ಸಮಾಧಿಯಲ್ಲಿ ಇಡಗೊಡಿಸುವುದಿಲ್ಲ. 10 ಈ ಇಬ್ಬರು ಪ್ರವಾದಿಗಳು ಭೂನಿವಾಸಿಗಳನ್ನು ಹಿಂಸಿಸಿದ್ದರಿಂದ ಇವರು ಸತ್ತದ್ದಕ್ಕೆ ಭೂನಿವಾಸಿಗಳು ಸಂತೋಷಿಸಿ ಸಂಭ್ರಮಗೊಂಡು ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕಳುಹಿಸುವರು. 11 ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವಶ್ವಾಸವು ಬಂದು ಆ ಶವಗಳಲ್ಲಿ ಪ್ರವೇಶಿಸಲು ಅವರು ಕಾಲೂರಿ ನಿಲ್ಲುವರು. ಅವರನ್ನು ನೋಡಿದವರೆಲ್ಲರೂ ಭಯದಿಂದ ನಡುಗಿದರು. 12 ಆ ನಂತರ ಅವರಿಗೆ - <<ಇಲ್ಲಿ ಮೇಲಕ್ಕೆ ಏರಿ ಬನ್ನಿರಿ!>> ಎಂದು ಆಕಾಶದಿಂದ ಮಹಾ ವಾಣಿಯು ತಿಳಿಸಿತು. ಅದನ್ನು ಕೇಳಿ ಅವರು ಮೇಘದಲ್ಲಿ ಪರಲೋಕಕ್ಕೆ ಏರಿಹೋದರು; ಅವರ ಶತ್ರುಗಳು ಅವರನ್ನು ನೋಡುತ್ತಾ ಇದ್ದರು. 13 ಅದೇ ಗಳಿಗೆಯಲ್ಲಿ ಮಹಾ ಭೂಕಂಪವುಂಟಾಗಿ ಆ ಪಟ್ಟಣದ ಹತ್ತರಲ್ಲೊಂದಂಶವು ಬಿದ್ದುಹೋಯಿತು; ಆ ಭೂಕಂಪದಿಂದ ಏಳು ಸಾವಿರ ಮಂದಿ ಸತ್ತು ಹೋದರು. ಉಳಿದವರು ಭಯಗ್ರಸ್ತರಾಗಿ ಪರಲೋಕದ ದೇವರನ್ನು ಘನಪಡಿಸಿದರು. 14 ಎರಡನೆಯ ವಿಪತ್ತು ಕಳೆದುಹೋಯಿತು; ಇಗೋ, ಮೂರನೆಯ ವಿಪತ್ತು ಬೇಗನೆ ಬರುತ್ತಿದೆ. ಏಳನೆಯ ತುತ್ತೂರಿ ಊದಿದ್ದು; ದೇವರ ನ್ಯಾಯತೀರ್ಪನ್ನು ಮಾಡುವ ಕಾಲ ಹತ್ತಿರ ಬಂದದ್ದಕ್ಕಾಗಿ ಪರಲೋಕದಲ್ಲಿ ಆತನಿಗೆ ಸ್ತೋತ್ರ ಉಂಟಾದದ್ದು 15 ಏಳನೆಯ ದೇವದೂತನು ತುತ್ತೂರಿಯನ್ನೂದಿದನು. ಆಗ ಪರಲೋಕದಲ್ಲಿ ಮಹಾಶಬ್ದಗಳುಂಟಾಗಿ, ಹೀಗೆ ಮೊಳಗಿದವು: <<ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ ಆತನ ಕ್ರಿಸ್ತನಿಗೂ ಬಂದಿದೆ; ಆತನು ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು>> ಎಂಬ ಮಹಾಘೋಷಣೆಯಾಯಿತು. 16 ತರುವಾಯ ದೇವರ ಸಮಕ್ಷಮದಲ್ಲಿ ತಮ್ಮ ತಮ್ಮ ಸಿಂಹಾಸನಗಳ ಮೇಲೆ ಕುಳಿತಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಆತನಿಗೆ ಅಡ್ಡಬಿದ್ದು - 17 ಸರ್ವಶಕ್ತನಾದ ದೇವರೇ, ಸದಾ ಇರುವಾತನೇ, ನೀನು ನಿನ್ನ ಮಹಾ ಅಧಿಕಾರವನ್ನು ವಹಿಸಿಕೊಂಡು ಆಳುತ್ತಿರುವುದರಿಂದ ನಾವು ನಿನ್ನನ್ನು ಸ್ತುತಿಸಿ ಕೊಂಡಾಡುತ್ತೇವೆ. 18 ಜನಾಂಗಗಳು ಕೋಪಿಸಿಕೊಂಡವು. ನಿನ್ನ ಕೋಪವೂ ಪ್ರಕಟವಾಯಿತು. ಸತ್ತವರು ತೀರ್ಪುಹೊಂದುವ ಸಮಯವು ಬಂದಿದೆ; ನೀನು ನಿನ್ನ ದಾಸರಾದ ಪ್ರವಾದಿಗಳಿಗೂ ದೇವಜನರಿಗೂ ನಿನ್ನ ನಾಮಕ್ಕೆ ಭಯಪಡುವ ಹಿರಿಯರೂ ಕಿರಿಯರೂ ಆಗಿರುವ ನಿನ್ನ ಭಕ್ತರಿಗೆ ಪ್ರತಿಫಲವನ್ನು ಕೊಡುವುದಕ್ಕೂ ಲೋಕನಾಶಕರನ್ನು ವಿನಾಶಗೊಳಿಸಲು ಇರುವ ಕಾಲವು ಬಂದಿದೆ>> ಎಂದು ಆತನನ್ನು ಆರಾಧಿಸಿದರು. 19 ಆಗ ಪರಲೋಕದಲ್ಲಿರುವ ದೇವಾಲಯವು ತೆರೆಯಿತು; ಆತನ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು; ಇದಲ್ಲದೆ, ಗರ್ಜನೆ, ಗುಡುಗು, ಮಿಂಚುಗಳೂ, ಭೂಕಂಪವೂ ದೊಡ್ಡ ಆಲಿಕಲ್ಲಿನ ಮಳೆಯೂ ಸುರಿಯಿತು.